ಪರಿಸರ, ವಿಜ್ಞಾನ ವಿಷಯಗಳನ್ನ ಸರಳ ಭಾಷೆಯಲ್ಲಿ ವಿವರಿಸುವ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರು ಹತ್ತು ಹಲವಾರು ಕಥೆ, ಕಾದಂಬರಿಗಳನ್ನು ರಚಿಸಿ ಓದುಗ ಬಳಗಕ್ಕೆ ಹೊಸತನವನ್ನ ಉಣಬಡಿಸಿದ್ದಾರೆ. ಪ್ರವಾಸ, ಚಾರಣ, ಛಾಯಾಗ್ರಹಣ ಇವರ ಪ್ರಮುಖ ಹವ್ಯಾಸಗಳು. 'ಮಹಾ ಪಲಾಯನ'ವು ಪುಚಂತೇ ಯವರ ಮಿಲೇನಿಯಂ ಸೀರೀಸ್ ನ ೧೪ನೇಯ ಪುಸ್ತಕ. ಪೋಲಿಷ್ ಮತ್ತು ಫ್ರೆಂಚ್ ಕೃತಿಗಳಿಂದ ಪ್ರಭಾವಿತರಾದ ಲೇಖಕರ ಆಲೋಚನೆಗಳೇ 'ಮಹಾಪಲಾಯನ' ಎಂಬ ರೋಚಕ ಹುಟ್ಟಿಗೆ ಕಾರಣವಾಯಿತು.
ಪೂಚಂತೇಯವರ ಮಾತುಗಳಲ್ಲೇ ಈ ಕೃತಿಯ ಬಗ್ಗೆ ವಿವರಣೆ ಕೊಟ್ಟರೆ ಬಹುಶಃ ಕೃತಿಗೆ ನ್ಯಾಯ ಒದಗಿಸಿದಂತೆ ಎಂಬ ಭಾವನೆ. ಮುನ್ನುಡಿಯಿಂದಲೇ ಆಯ್ದ ಅವರ ಮಾತುಗಳು --
''ಈ ಕೃತಿಯ ಬಗ್ಗೆ ನಾನು ಹೆಚ್ಚಿಗೆ ಹೇಳುವುದು ಏನೂ ಇಲ್ಲ . ನನ್ನ ಜೀವನದಲ್ಲಿ ನನ್ನನ್ನು ಅತ್ಯಂತ ಆಳವಾಗಿ ಕಲಕಿದ , ಬಹುದಿನಗಳವರೆಗೆ ಕಾಡಿದ ಮಹಾ ಪಲಾಯನದ ಎರಡು ಕೃತಿಗಳೆಂದರೆ ಪೋಲಿಷ್ ಲೇಖಕ ಸ್ಲಾವೋಮಿರ್ ರಾವಿಸ್ ಬರೆದ 'ದಿ ಲಾಂಗ್ ವಾಕ್' ಮತ್ತು ಫ್ರೆಂಚ್ ಲೇಖಕ ಹೆನ್ರಿ ಛಾರೇರೆ ಬರೆದ 'ಪ್ಯಾಪಿಲಾನ್' ಕೃತಿಗಳು. ಸಂಕೋಲೆಯಿಂದ ವಿಮುಕ್ತವಾಗಲು , ಬಂಧನದಿಂದ ಪಾರಾಗಲು ಮನುಷ್ಯ ಪ್ರಯತ್ನದ ಅಸಾಧ್ಯ ಸಾಧ್ಯತೆಗಳಿಗೆ ಇವರಿಬ್ಬರ ಅನುಭವಗಳು ಜ್ವಲಂತ ಉದಾಹರಣೆಗಳು. ಛಾರೇರೆಯ ಪುಸ್ತಕ ಬಹು ದೊಡ್ಡ ದಾದ್ದರಿಂದ ರಾವಿಸ್ ಅನುಭವಗಳ ಸಂಗ್ರಹ ಮಾತ್ರ ಇಲ್ಲಿ ಕೊಟ್ಟಿದ್ದೇನೆ. ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ , ನ್ಯಾಯದ ಹೆಸರಿನಲ್ಲಿ , ಸಮಾನತೆಯ ಹೆಸರಿನಲ್ಲಿ , ಸಿಧ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರೇಪಿಸುತ್ತದೆ. ಮಾರ್ಕ್ಸವಾದದ ಆದರ್ಶದಲ್ಲಿ , ಇಡೀ ವಿಶ್ವವನ್ನೇ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಡಿಸುವ ಹುಚ್ಚಿನಲ್ಲಿ ಆ ದೇಶಗಳಲ್ಲಿ ನಡೆಯುತ್ತಿದ್ದ ಅಮಾನುಷ ಕೃತ್ಯಗಳತ್ತ ಮೊದಲ ಬಾರಿ ಜಗತ್ತಿನ ಗಮನ ಸೆಳೆದ ಪುಸ್ತಕ ಸ್ಲಾವೋಮಿರ್ ರಾವಿಸ್ ನ ಕೃತಿ ' ಮಹಾ ಪಲಾಯನ'. ಈ ಶತಮಾನ ಕಳೆಯುವುದರೊಳಗೆ ಆ ದೇಶಗಳೆಲ್ಲಾ ತಮ್ಮ ಭ್ರಾಂತಿಯಿಂದ ಎಚ್ಚೆತ್ತುಕೊಂಡವು ಎನ್ನುವುದು ಸಮಾಧಾನದ ಸಂಗತಿಯಾದರೂ, ಸಮಾನತೆಯ ದಿವ್ಯಾದರ್ಶನ ಜಪಿಸುತ್ತಲೇ ಎಂಥ ನಿರರ್ಥಕ ಕ್ರೌರ್ಯದ ಆರಾಧನೆಯಲ್ಲಿ , ಎಷ್ಟು ಮುಗ್ಧ ಹೃದಯಗಳ ಬದುಕನ್ನು ಹೊಸಕಿದರು ಎನ್ನುವುದು ನಮ್ಮನ್ನು ಖಿನ್ನಗೊಳಿಸುತ್ತದೆ. ಉನ್ನತ ನಾಗರಿಕ ಸಮಾಜದ ಕ್ರೌರ್ಯದಿಂದ ಪಲಾಯನ ಮಾಡಿದ ಸ್ಲಾವೋಮಿರ್ ಅನಾಗರಿಕ ಅಸಂಸ್ಕೃತ ಅಲೆಮಾರಿಗಳಲ್ಲಿ ಕಂಡ ಔದಾರ್ಯ , ಮಾನವೀಯತೆ, ಹೃದಯವಂತಿಕೆಗಳಿಂದ ಮತ್ತೆ ಮನುಷ್ಯತ್ವದ ಬಗ್ಗೆ ಭರವಸೆ ಮೂಡುತ್ತದೆ.
ಈ ಶತಮಾನದ ಬಹುಪಾಲನ್ನು ಕಾಡಿದ ರಾಜಕೀಯ ಮೂಲಭೂತವಾದದ ಯುಗವೇನೋ ಕೊನೆಯಾಗುತ್ತಿದೆ, ಆದರೆ ಅದರ ಜಾಗವನ್ನು ಧಾರ್ಮಿಕ ಮೂಲಭೂತವಾದ ಆಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ. ಮತ್ತೊಮ್ಮೆ ಮಾನವೀಯತೆಯ ಮೇಲೆ ಕ್ರೌರ್ಯ, ದಬ್ಬಾಳಿಕೆ, ದಮನಗಳನ್ನು ಇದು ಹೇರಿ ಇಪ್ಪತ್ತೊಂದನೆ ಶತಮಾನವನ್ನೂ ರಕ್ತಸಿಕ್ತಗೊಳಿಸುವ ಮೊದಲು ಎಚ್ಚರಿಸುವುದು ಈ ಕೃತಿಯ ಪರೋಕ್ಷ ಉದ್ದೇಶಗಳಲ್ಲಿ ಒಂದು.''
(ಮಾಹಿತಿ ಸಂಗ್ರಹ & ನಿರೂಪಣೆ: ಪ್ರಜ್ಞ ಜಿ.ಕೆ.)
ಲೇಖಕರು: ಕೆ. ಪಿ. ಪೂರ್ಣ ಚಂದ್ರ ತೇಜಸ್ವಿ
ಪ್ರಕಾಶಕರು:ಪುಸ್ತಕ ಪ್ರಕಾಶನ
91, 9ನೇ ಮುಖ್ಯ ರಸ್ತೆ
ಸರಸ್ವತಿ ಪುರಂ,
ಮೈಸೂರು-570009
ಪುಟಗಳು: 95
No comments:
Post a Comment